ಮಕ್ಮಲ್ ಟೋಪಿ ಹಾಕೋಕೆ ಬರ್ಬೇಡಿ: ಸಿಇಒ ಪ್ರಭು, ಡಿಸಿ ಶುಭಾ ಕಲ್ಯಾಣ್ ಮೇಲೆ ಸೋಮಣ್ಣ ಗರಂ

ತುಮಕೂರು: ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯವನ್ನು ಕೇಂದ್ರ ಸಚಿವ ವಿ.ಸೋಮಣ್ಣ ವಿಚಾರಿಸಿದರು.

ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ವಿ.ಸೋಮಣ್ಣ, ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು.

ಈ ವೇಳೆ ಜಿಲ್ಲಾಡಳಿತ ಯಾವೊಬ್ಬ ಅಧಿಕಾರಿಗಳು ಇಲ್ಲದನ್ನು ಕಂಡು ಗರಂ ಆದ ಸೋಮಣ್ಣ, ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರಿಗೆ ಫೋನ್ ಮಾಡಿದ ಸಚಿವ ಸೋಮಣ್ಣ ಅವರು, ಕೇಂದ್ರ ಸರ್ಕಾರಕ್ಕೂ ನಿಮಗೂ ಸಂಬಂಧವಿಲ್ಲವೇ? ಫೋನ್ ಮಾಡಿ ಆಸ್ಪತ್ರೆಗೆ ಬರುತ್ತೇನೆ ಎಂದು ಹೇಳಿದರು, ನೀವು ಬಂದಿಲ್ಲ, ನಾನು ವರದಿ ಮಾಡಿದರೆ ಏನಾಗುತ್ತೇ ಗೊತ್ತಿಲ್ಲವೇ? ಯಾವೊಬ್ಬ ಅಧಿಕಾರಿಯೂ ಇಲ್ಲಿಗೆ ಬಂದಿಲ್ಲ ಎಂದು ಹರಿಹಾಯ್ದರು.

ಜಿಲ್ಲಾಧಿಕಾರಿಗಳು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಕೊರಟಗೆರೆಯಲ್ಲಿ ಇರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರೆ, ನಾನು ಸಚಿವನಲ್ಲವೇ? ಕೊರಟಗೆರೆಯಲ್ಲಿ ಗಿಡ ನೆಡುವುದು ಮುಖ್ಯವೋ, ಇಲ್ಲಿ ಜನರ ಪ್ರಾಣ ಕಾಪಾಡುವುದು ಮುಖ್ಯವೋ, ಡಿಎಚ್ಒ, ಡಿಎಸ್ ಇಬ್ಬರನ್ನು ಬಿಟ್ಟರೆ ಬೇರೆ ಯಾರು ಇಲ್ಲ, ಇವರು ನೀರು ಕೊಡುತ್ತಾರೆಯೇ? ಆರ್ ಡಿಪಿಆರ್ ಅಧಿಕಾರಿಗಳು ಎಲ್ಲಿದ್ದಾರೆ? ಇಂದು ಸಂಜೆಯೊಳಗೆ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯತಿ ಸಿಇಒ ಜಿ.ಪ್ರಭು ಅವರಿಗೆ ಫೋನ್ ಮಾಡಿ ಗರಂ ಆದ ವಿ.ಸೋಮಣ್ಣ ಅವರು, ಆಸ್ಪತ್ರೆಯಲ್ಲಿ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ, ನಿಮಗೆ ಗಿಡ ನಡೆವುದು ಮುಖ್ಯವಾಯಿತು, ಎಲ್ಲಿಂದ ಬಂದ್ದಿದ್ದೀಯಾ? ಹಿನ್ನೆಲೆ ಏನು ಎನ್ನುವುದು ಮರೆಯಬೇಡ, ಅವರೊಬ್ಬರೇ ಸಚಿವರಲ್ಲ, ನಾನು ಸಚಿವನೇ, ಫೋನ್ ಮಾಡಿ ಆಸ್ಪತ್ರೆಗೆ ಬರುತ್ತೀನಿ ಅಂದ್ರು ಯಾವ ಅಧಿಕಾರಿಗಳು ಇಲ್ಲ ಎಂದು ಗರಂ ಆದರು.

ಈ ವೇಳೆ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕರಾದ ಜ್ಯೋತಿಗಣೇಶ್, ಸುರೇಶ್ ಗೌಡ, ಚಿದಾನಂದಗೌಡ, ಮಾಜಿ ಶಾಸಕ ಎಂ.ವಿ.ವೀರಭದ್ರಯ್ಯ ಸೇರಿದಂತೆ ಇತರರಿದ್ದರು.

Verified by MonsterInsights