ಜ. 21 ರಿಂದ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನ

ಹಾವೇರಿ: ಇದೇ 21 ರಿಂದ 29 ರವರೆಗೆ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನವನ್ನು ಬಿಜೆಪಿ ನಡೆಸಲಿದ್ದು, ಸರಣಿ ಕಾರ್ಯಕ್ರಮಗಳ‌ ಮೂಲಕ ಜನಸಾಮಾನ್ಯರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ ಎಂದು ಶಾಸನ ನೆಹರು ಓಲೇಕಾರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ 39 ಸಂಘಟನಾ ಜಿಲ್ಲೆಗಳು, 312 ಮಂಡಲಗಳಲ್ಲಿ ಈ ಅಭಿಯಾನ ನಡೆಯಲಿದೆ. ಮಹಾಶಕ್ತಿ ಕೇಂದ್ರ ಮತ್ತು ಶಕ್ತಿ ಕೇಂದ್ರಗಳ ಸಭೆಗಳು ನಡೆಯಲಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದಲ್ಲಿ ಜ.21 ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮತ್ತು ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದರು.

ಈ ಅಭಿಯಾನದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜನ್‌ಧನ್, ಪಿಎಂ ಕಿಸಾನ್‌, ಪಿಎಂ ಆವಾಸ್‌, ಉಜ್ವಲಾ, ರೈತ ವಿದ್ಯಾನಿಧಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಫಲಾನುಭವಿಗಳನ್ನು ಸಂರ್ಕಿಸುತ್ತೇವೆ. ಸುಮಾರು ಎರಡು ಕೋಟಿಗೂ ಹೆಚ್ಚು ಫಲಾನುಭವಿಗಳು ಎಂದರೆ, ಒಂದು ಕೋಟಿ ಕುಟುಂಬಗಳನ್ನು ಸಂಪರ್ಕಿಸುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದರು.

*ಪ್ರಜಾಧ್ವನಿ ಯಾತ್ರೆ ವಿಫಲ*

ಹಾವೇರಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ‘ಪ್ರಜಾಧ್ವನಿ ಯಾತ್ರೆ’ ಸಫಲವಾಗುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇಲ್ಲಾ. ಒಬ್ಬರಿಗೆ ಒಬ್ಬರು ಮುಖ ನೋಡದ ಸನ್ನಿವೇಶದಲ್ಲಿ ಅಲ್ಲಿದೆ. ಇವರಿಂದ ಯಾವ ನಿರೀಕ್ಷಿಯನ್ನು ಬಯಸಲು ಸಾಧ್ಯವಿಲ್ಲ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರ ಕಾರ್ಯಕ್ರಮಗಳು ನಿರಂತರ ಜಾರಿಗೆ ತರುವ ಮೂಲಕ ಅಭಿವೃದ್ಧಿ ಪರ್ವ ಹರಿಸಿವೆ. ಕಾಂಗ್ರೆಸ್ ನಾಯಕರು 4 ವರ್ಷ ಮಲಗಿ ಚುನಾವಣೆ ಹತ್ತಿರ ಬಂದಾಗ ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ 40% ಭ್ರಷ್ಟಾಚಾರ ಆರಂಭಿಸಿದ್ದೆ ಕಾಂಗ್ರೆಸ್ ಸರ್ಕಾರ. ತನ್ನ ಅಧಿಕಾರವದಲ್ಲಿ ಹೆಚ್ಚು ಕಮೀಷನ್ ಪಡೆದು ಯೋಜನೆ ಮಾಡಿದ ಕೀರ್ತಿ ಕಾಂಗ್ರೆಸ್ ನಾಯಕರಿಗೆ ಸಲ್ಲುತ್ತದೆ‌. ವಿನಾ ಕಾರಣ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ‌. ಇದು ಸತ್ಯಕ್ಕೆ ದೂರವಾದ ಸಂಗತಿ ಎಂದರು.

ಬಿಜೆಪಿ ಜಿಲ್ಲಾದ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಎಲ್ಲ ಬೂತಗಳನ್ನು ಸದೃಢಗೊಳಿಸಲು ವಿಜಯ ಸಂಕಲ್ಪ ಯಾತ್ರೆಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರದ ಸಾಧನೆಗಳು ತಲುಪಿದ ಬಗ್ಗೆ ಖಾತರಿ ಮಾಡಿಕೊಳ್ಳಲು ಸಹಾಯವಾಗುತ್ತದೆ ಯಾತ್ರೆ ಮೂಲಕ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮನೆಗಳ ಮೇಲೆ ಪಕ್ಷವನ್ನು ಬೆಂಬಲಿಸುವ ಉದ್ದೇಶದ ಸ್ಟಿಕ್ಕರ್‌ ಗಳನ್ನು ಅಂಟಿಸಲಾಗುವುದು. ಕರಪತ್ರ ಹಂಚುವ ಮೂಲಕ ಫಲಾನುಭವಿಗಳನ್ನು ಸಂಪರ್ಕಿಸಲಾಗುತ್ತದೆ. ಇದರೊಂದಿಗೆ ಮಿಸ್ ಕಾಲ್ ಅಭಿಯಾನ ಆರಂಭಿಸಿ ಸದಸ್ಯತ್ವ ನೀಡಲಾಗುತ್ತದೆ. ಈ ಕಾರ್ಯಕ್ರಮ ಏಕ ಕಾಲದಲ್ಲಿ 58 ಸಾವಿರ ಬೂತ್‌ಗಳಲ್ಲಿ ನಡೆಯಲಿದೆ. ಇದರಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ವಕ್ತಾರ ಫ್ರಭು ಹಿಟ್ನಲಿ, ಸುನೀಲ ರಾಯ್ಕರ್, ರುದ್ರೇಶ ಚಿನ್ನಣ್ಣನವರ, ಮಧು ಹಂದ್ರಾಳ, ಕೃಷ್ಣ ಈಳಗೇರ, ನೀಲಪ್ಪ ಚಾವಡಿ ಸೇರಿದಂತೆ ಇತರರು ಇದ್ದರು.

Verified by MonsterInsights