80 ಎಕರೆ ಭೂಮಿ ಖರೀದಿಸಿದ ಎಂಪಿ: ಎಸ್.ಆರ್.ಶ್ರೀನಿವಾಸ್

 

ತುಮಕೂರು: ನಾನು ರಾಜಕಾರಣಕ್ಕೆ ಬಂದ್ಮೇಲೆ ಒಂದು ಎಕರೆ ಭೂಮಿ ಖರೀದಿ ಮಾಡಿಲ್ಲ, ಈ ಸಾರಿ ಎಂಪಿ ಚುನಾವಣೆ ಗೆದ್ದ ಮೇಲೆ 80 ಎಕರೆ ಭೂಮಿ ಖರೀದಿಸಿದ್ದಾನೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಗರ್ ಹುಕುಂ ಸಮಿತಿ ಸದಸ್ಯರಿಗೆ ಹೇಳಿಕೊಟ್ಟು, ತಹಶೀಲ್ದಾರ್ ಗೆ ಫೋನ್ ಮಾಡಿ, ಭೂ ಮಂಜೂರಾತಿ ಮಾಡದಂತೆ ತಾಕೀತು ಮಾಡಿದ್ದಾರೆ, ಜನರಿಗೆ ಒಳ್ಳೇಯದನ್ನು ಮಾಡದೇ, ವೈಯಕ್ತಿಕ ಕೆಲಸ ಮಾಡುವವರು ಯಾರಾದರೂ ಇದ್ದರೆ ಅದು ಸಂಸದರು ಮಾತ್ರ ಎಂದು ಕುಹಕವಾಡಿದರು.

ನಾನು ರೈತ ನನಗೆ ವರ್ಷಕ್ಕೆ ತೆಂಗು ಮತ್ತು ಅಡಿಕೆಯಿಂದ ಒಂದು ಕೋಟಿ ಆದಾಯ ಬರುತ್ತದೆ ಅದರಲ್ಲಿಯೇ ಜೀವನ ಮಾಡುತ್ತೇನೆ, ಚುನಾವಣೆಯಲ್ಲಿ ಗೆದ್ದಾಗಲೆಲ್ಲ ಭೂಮಿ ಖರೀದಿಸುವ ಸಂಸದರು ದೊಡ್ಡವೀರನಹಳ್ಳಿ ಗೇಟ್ ಬಳಿ 80 ಎಕರೆ ಭೂಮಿ ಖರೀದಿಸಿದ್ದಾರೆ ಇವರನ್ನು ಲೂಟಿಕೋರ ಅನ್ನದೇ ಇನ್ನೇನು ಅನ್ನಬೇಕು ಎಂದರು.

ಬಗರ್ ಹುಕುಂ ಸಮಿತಿ ಸದಸ್ಯರು ಸಹಕಾರ ನೀಡುತ್ತಿಲ್ಲ, ಮೂವತ್ತು, ನಲ್ವತ್ತು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ಮಾಡಲು ಸಹಿ ಹಾಕುವುದಿಲ್ಲ ಎನ್ನುತ್ತಾರೆ, ಬಿಜೆಪಿ ಗುಬ್ಬಿಯಲ್ಲಿ ಅಭಿವೃದ್ಧಿ ಅಡ್ಡಗಾಲು ಹಾಕಿದೆ ಎಂದು ದೂರಿದರು.

ಅಕ್ರಮ ಭೂ ಹಗರಣ ಸಂಬಂಧ ಸಿಒಡಿ ತನಿಖೆ ನಡೆಯುತ್ತಿದೆ, ಅಕ್ರಮ ಮಾಡಿರುವವರು ಜೈಲಿಗೆ ಹೋಗುತ್ತಾರೆ, ನಾನೇ ತಹಶೀಲ್ದಾರ್ ಗೆ ಹೇಳಿ ಪೊಲೀಸ್ ಕಂಪ್ಲೇಟ್ ಕೊಡಿಸಿದ್ದೇನೆ, ಆದರೆ ಗುಬ್ಬಿಯ ಹೆಬ್ಬೆಟ್ಟು ಬಿಜೆಪಿ ಮುಖಂಡರು ಅಕ್ರಮಕ್ಕೆ ಶ್ರೀನಿವಾಸ್ ಕಾರಣ ಎಂದು ಅಪಪ್ರಚಾರ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Verified by MonsterInsights