ಹಾಲು ಕಳ್ಳರಿಗೆ ಶಿಕ್ಷೆ ಆಗಲಿ: ಕೆ.ಎನ್.ರಾಜಣ್ಣ

ತುಮಕೂರು (TUMAKURU): ಮಧುಗಿರಿ ತಾಲ್ಲೂಕಿನಲ್ಲಿ ರೈತರ ಹಾಲು ಕಳವು ಮಾಡಿ ವಂಚಿಸುತ್ತಿದ್ದ ಪ್ರಕರಣದ ಬಗ್ಗೆ ಕೂಲಂಕಷ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಆಗಬೇಕು ಎಂದು ಮಧುಗಿರಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್. ರಾಜಣ್ಣ (K.N.RAJANNA) ಆಗ್ರಹಿಸಿದರು.

ಹಾಲು ಕಳ್ಳರಿಂದ ರೈತರಗೆ ಆಗಿರುವ ಅನ್ಯಾಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ (TUMAKURU POLICE) ಇಲಾಖೆ ಗಮನಹರಿಸಿ ಸೂಕ್ತ ತನಿಖೆ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ (TUMAKURU MILK UNION) ಮೇಲುಸ್ತುವಾರಿಯಲ್ಲಿ ಕೆಲಸ ಮಾಡುವಂತಹ ಮಧುಗಿರಿ ತಾಲ್ಲೂಕಿನ ಸೊಸೈಟಿಗಳಲ್ಲಿ ಹಾಲನ್ನು ಕಳ್ಳತನ ಮಾಡಿ ಹಾಲಿನ ಬದಲಾಗಿ ನೀರು ತುಂಬಿಸಿ ಕಳುಹಿಸುತ್ತಿದ್ದು, ಇದರಿಂದ ಮಧುಗಿರಿಯಲ್ಲಿ ಹಾಲು ಗುಣಮಟ್ಟವಿಲ್ಲ. ಹಾಲು 60 ಪರ್ಸೆಂಟ್ ಗ್ರೇಡ್ ಬರುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದರ ಹಿಂದಿನ ಮರ್ಮ ಏನೆಂಬುದು ಇದೀಗ ಬಯಲಾಗಿದೆ ಎಂದರು.

ನಾಗೇಶ್‌ಬಾಬು (NAGESH BABU) ಅವರು ಪತ್ರಿಕಾಗೋಷ್ಠಿ ನಡೆಸಿ ಮಧುಗಿರಿ ತಾಲ್ಲೂಕಿನ ಹಾಲು ಒಕ್ಕೂಟದ ಸೊಸೈಟಿಗಳಲ್ಲಿ ಆಗಿರುವ ಅನ್ಯಾಯ, ಹಾಲಿನ ವಂಚನೆ, ಕಳ್ಳತನದ ಬಗ್ಗೆ ಬಯಲಿಗೆಳೆದರು. ಆ ನಂತರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದವರು ದೂರು ದಾಖಲು ಮಾಡಿದ್ದಾರೆ. ಮೇ 17 ರಿಂದ 20 ರವರೆಗೆ ಯಾವುದೇ ದೂರು ನೀಡದೆ ವಿಳಂಬ ಮಾಡಿರುವುದನ್ನು ನೋಡಿದರೆ ಮಧುಗಿರಿ (MADHUGIRI) ತಾಲ್ಲೂಕಿನಲ್ಲಿ ಒಕ್ಕೂಟದ ಆಡಳಿತ (TUMUL) ಮಂಡಳಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವಂತಹವರಿಂದ ಹಾಲು ಕಳ್ಳತನ ಮಾಡುವ ನಿರಂತರ ದಂಧೆ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅವರು ಆರೋಪಿಸಿದರು.

ಆದ್ದರಿಂದ ಕೂಡಲೇ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸುವ ಮೂಲಕ ಅನ್ಯಾಯಕ್ಕೆ ಒಳಗಾಗಿರುವ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಅವರು ಅಧಿಕಾರಿಗಳನ್ನು ಒತ್ತಾಯಿಸಿದರು.

 

 

Verified by MonsterInsights