ಮೂಗ್ಬಟ್ಟು ರಾಜಕಾರಣ ಮಾಡಲ್ಲ, ಮತ ಭಿಕ್ಷೆ ಕೇಳುತ್ತೇನೆ: ಸೊಗಡು ಶಿವಣ್ಣ

ತುಮಕೂರು: ಚುನಾವಣೆಯಲ್ಲಿ ಹಣ ಹಂಚಿ ಮತ ಖರೀದಿ ಮಾಡಲು ಸ್ಪರ್ಧಿಸುತ್ತಿಲ್ಲ, ಮತಭಿಕ್ಷೆ ಕೇಳಲು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸೊಗಡು ಶಿವಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಗ್ಬಟ್ಟು ಹಂಚಿ ರಾಜಕಾರಣ ಮಾಡುತ್ತಿದ್ದಾರೆ, ಮನೆಯ ಬಾಗಿಲನ್ನೇ ತೆಗೆಯದೇ ಇರುವವರ ಮಧ್ಯೆ ಜನರ ಸೇವೆ ಮಾಡಲು, ಅನೇಕ ಸಮುದಾಯಗಳ ಮುಖಂಡರ ಒತ್ತಾಯದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.

ಯಡಿಯೂರಪ್ಪ ಮಾತಿಗೆ ಕಟ್ಟುಬಿದ್ದು ತ್ಯಾಗ ಮಾಡಿದೆ, ನಮಗೆ ಅಧಿಕಾರ ಕೊಡಲು ಜ್ಯೋತಿಗಣೇಶ್ ಯಾರು? ಅಪ್ಪ ಮಕ್ಕಳು ಬೇನಾಮಿ ಆಸ್ತಿ ಮಾಡ್ಕೊಂಡು ನನ್ನ ಸಾಲದ ಬಗ್ಗೆ ಮಾತನಾಡುತ್ತಿದ್ದಾರೆ, ನನಗೆ ಯಾವ ಆಸ್ತಿಯೂ ಬಂದಿಲ್ಲ, ಕಷ್ಟ ಪಟ್ಟು ದುಡಿದು ಸಾಲ ತೀರಿಸುತ್ತೇನೆ ಎಂದರು.

ದಲಿತ ಮುಖಂಡ ನರಸಿಂಹಯ್ಯ ಮಾತನಾಡಿ, ಶಾಸಕ ಜ್ಯೋತಿಗಣೇಶ್ ಗೆ ಕಾರ್ಪೋರೇಟ್ ಸಂಸ್ಕೃತಿ ಹೊಂದಿದ್ದಾರೆ, ಈ ಹಿಂದೆ ಇದ್ದ ಕಾಂಗ್ರೆಸ್ ಶಾಸಕರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದರು ಇವರಿಅಮದ ನಗರದ ಜನರಿಗೆ ಅನ್ಯಾಯವಾಗಿದೆ ಎಂದರು.

ಸೊಗಡು ಶಿವಣ್ಣ ಅಧಿಕಾರದಲ್ಲಿ ಇದ್ದಾಗ ನಗರದಲ್ಲಿ ರೌಡಿಸಂ, ಗ್ಯಾಬ್ಲಿಂಗ್, ಮೀಟರ್ ಬಡ್ಡಿಗೆ ಕಡಿವಾಣ ಹಾಕಿದ್ದರು, ಇವತ್ತು ಎಲ್ಲ ದಲಿತ ಕೇರಿಗಳ ಮತಗಳು ಮಾರಾಟಕ್ಕೆ ಇವೆ ಎನ್ನುವಂತೆ ಬಿಂಬಿಸಿದ್ದಾರೆ, ಹಣ ಇದ್ದರೆ ಚುನಾವಣೆ ಗೆಲ್ಲಬಹುದು ಎಂದು ಹೊರಟಿರುವವರಿಗೆ ಪಾಠ ಕಲಿಸಲು ಜೋಳಿಗೆ ಹಾಕಿದ್ದೇವೆ ಎಂದರು.

ಕನ್ನಡ ಪರ ಸಂಘಟನೆಯ ಮುಖಂಡ ಧನಿಯಾಕುಮಾರ್ ಮಾತನಾಡಿ ಪಾಲಿಕೆಯಲ್ಲಿ ಖಾತೆ ಮಾಡಲು 50 ಸಾವಿರ ಲಂಚ ನೀಡಬೇಕಾದ ಪರಿಸ್ಥಿತಿ ಇದೆ, ಜನರನ್ನು ಲೂಟಿ ಮಾಡುತ್ತಿದ್ದಾರೆ, ಇಂತಹ ಕೆಟ್ಟ ಪರಿಸ್ಥಿತಿಯನ್ನು ದೂರ ಮಾಡಲು ಶಿವಣ್ಣ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಎಲ್ಲ ವಾರ್ಡ್ ಗಳಲ್ಲಿಯೂ ಈಗಾಗಲೇ ಹಣ ಹಂಚುತ್ತಿದ್ದಾರೆ, 60 ರೂಪಾಯಿ ಸೀರೆ, 200 ರೂಪಾಯಿ ಕುಕ್ಕರ್ ಕೊಟ್ಟು ಆಣೆ ಪ್ರಮಾಣ ಮಾಡಿಸಿಕೊಳ್ಳುವ ರಾಜಕಾರಣಿಗಳು ಮನೆ ಮಕ್ಕಳನ್ನು ಕರೆದುಕೊಂಡು ಬಂದು ಪ್ರಮಾಣ ಮಾಡಲಿ, ತುಮಕೂರಿನಲ್ಲೇ ಇರುತ್ತೇನೆ, ಫೋನ್ ರಿಸೀವ್ ಮಾಡ್ತೀನಿ, ತುಮಕೂರಿನಲ್ಲೇ ಇರುತ್ತೇನೆ ಎಂದು ಪ್ರಮಾಣ ಮಾಡಲಿ ನೋಡೋಣ ಎಂದರು.

ಸುದ್ದಿಗೋಷ್ಠಿಯಲ್ಲಿ ನರಸಿಂಹಯ್ಯ, ಜಯಸಿಂಹರಾವ್, ಪಂಚಾಕ್ಷರಯ್ಯ, ನವೀನ್ ರಾಜಣ್ಣ, ಶಬ್ಬೀರ್ ಅಹಮದ್, ಜಯಪ್ರಕಾಶ್, ಅನಿಲ್ ಕುಮಾರ್, ಕೆ.ಪಿ.ಮಹೇಶ್, ಹರೀಶ್,  ಸೇರಿದಂತೆ ಇತರರಿದ್ದರು.

Verified by MonsterInsights