ತುಮಕೂರಿಗೆ ಡಿ ಬಾಸ್ ಎಲ್ಲಿ? ಯಾವಾಗ ಗೊತ್ತಾ?

ಸಾರಥಿ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ತುಮಕೂರಿನಲ್ಲಿ ನಡೆದಿತ್ತು ಈಗ ಕ್ರಾಂತಿ ಸಿನಿಮಾದ ಕೊನೆಯ ಸಾಂಗ್ ಬಿಡುಗಡೆಯೂ ತುಮಕೂರಿನಲ್ಲಿ ನಡೆಯಲಿದೆ

ತುಮಕೂರು:ಕನ್ನಡ ಚಲನಚಿತ್ರರಂಗಕ್ಕೆ ಲೈಟ್‌ಬಾಯ್ ಆಗಿ ಪ್ರವೇಶ ಪಡೆದು,ಇಂದು ಪ್ರಪಂಚದ ಕನ್ನಡಿಗರ ಮನೆ ಮಾತಾಗಿರುವ,ಡಿ ಬಾಸ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ದರ್ಶನ್ ತೂಗುದೀಪ್ ಅವರ ಮಹಾತ್ವಾಕಾಂಕ್ಷೆಯ ಕ್ರಾಂತಿ ಸಿನಿಮಾದ ನಾಲ್ಕನೇ ಹಾಡಿನ ಬಿಡುಗಡೆ ಸಮಾರಂಭ ಜನವರಿ 14ರ ಶನಿವಾರ ಸಂಜೆ 7 ಗಂಟೆಗೆ ಡಾ.ಶ್ರೀಶಿವಕುಮಾರಸ್ವಾಮೀಜಿ ವೃತ್ತದಲ್ಲಿ ನಡೆಯಲಿದೆ ಎಂದು ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ.

ಜನವರಿ 14 ರ ಶನಿವಾರ ಸಂಜೆ ಕ್ರಾಂತಿ ಸಿನಿಮಾದ ನಾಲ್ಕನೇ ಹಾಡಿನ ಸಿಡಿ ಬಿಡುಗಡೆ ಸಮಾರಂಭಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಜಿಲ್ಲೆಯ ದರ್ಶನ ಅಭಿಮಾನಿಗಳ ಸಂಘದ ಮುಖಂಡರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡುತಿದ್ದ ಅವರು,ಕಾರ್ಯಕ್ರಮಕ್ಕೆ ಜಿಲ್ಲಾಡಳಿತ 10 ನಿಮಿಷಗಳ ಕಾಲಾವಕಾಶ ನೀಡಿದೆ. ಅಂದು ಸಂಜೆ 7 ಗಂಟೆಗೆ ಕ್ರಾಂತಿ ಸಿನಿಮಾದ ಸಂಗೀತ ನಿರ್ದೇಶಕ ಹರಿಕೃಷ್ಣ,ನಾಯಕ ನಟಿ ರಚಿತಾರಾಮ್,ನಾಯಕ ನಟ ಡಿ ಬಾಸ್ ದರ್ಶನ ಅವರುಗಳೊಂದಿಗೆ ಚಿತ್ರತಂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವ ನಿಟ್ಟಿನಲ್ಲಿ ದರ್ಶನ ಅಭಿಮಾನಿ ಬಳಗ ನಿವೆಲ್ಲರೂ ಮೈಯಲ್ಲಾ ಕಣ್ಣಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.

ತುಮಕೂರು ಜಿಲ್ಲೆಯಲ್ಲಿ ಚಲನಚಿತ್ರ ನಟರ ಅಭಿಮಾನಿಗಳ ಸಂಘಗಳ ನಡುವೆ ವೈಷಮ್ಯವಿಲ್ಲ. ಎಲ್ಲರು ಒಗ್ಗೂಡಿಯೇ ಈ ಕಾರ್ಯಕ್ರಮ ನಡೆಸಿಕೊಡಲಿದ್ದೇವೆ.ತುಮಕೂರು ಕಲಾವಿದರ ತವರೂರು,ನೂರಾರು ಜನ ಕಲಾವಿದರು ಇಲ್ಲಿಂದ ಬದುಕು ಕಟ್ಟಿಕೊಂಡ ಉದಾಹರಣೆಗಳಿವೆ.ಹಾಗಾಗಿ ಎಲ್ಲರೂ ಒಗ್ಗೂಡಿಯೇ ಕೆಲಸ ಮಾಡಿ,ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಅಭಿಮಾನಿಗಳು, ತಮ್ಮೊಂದಿಗೆ ತಮ್ಮ ತಾಲೂಕಿನ ಪ್ರಸಿದ್ದ ಕಲಾತಂಡವನ್ನು ಕರೆತಂದು ಪ್ರದರ್ಶನ ನೀಡುವ ವ್ಯವಸ್ಥೇ ಮಾಡಬೇಕೆಂದರು.

ದರ್ಶನ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷ ಗೋವಿಂದರಾಜು ಮಾತನಾಡಿ, ಸಾರಥಿ ಸಿನಿಮಾದ ಅಡಿಯೋ ಬಿಡುಗಡೆಗೆ ದರ್ಶನ ತುಮಕೂರಿಗೆ ಆಗಮಿಸಿದ್ದರು. ಈಗ 2023ಕ್ಕೆ ಕ್ರಾಂತಿ ಸಿನಿಮಾದ ಹಾಡು ರಿಲೀಸ್‌ಗೆ ಆಗಮಿಸುತ್ತಿದ್ದು, ಸಣ್ಣ ಅಹಿತಕರ ಘಟನೆಯೂ ನಡೆದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು. ಪೊಲೀಸರೊಂದಿಗೆ,ದರ್ಶನ ಅಭಿಮಾನಿಗಳು ಸಹ ಮೈಯೆಲ್ಲಾ ಕಣ್ಣಾಗಿ ಚಿತ್ರತಂಡದ ಕಲಾವಿದರನ್ನು ಗೌರವಯುತವಾಗಿ ಕಳುಹಿಸಿಕೊಡುವ ಕೆಲಸ ಮಾಡೋಣ ಎಂದರು.

ದರ್ಶನ್ ಅಭಿಮಾನಿ ಬಳಗ ಗುರುರಾಜ್ ಮಾತನಾಡಿ,ಕ್ರಾಂತಿ ಸಿನಿಮಾದ ಕೊನೆಯ ಹಾಡಿನ ರಿಲೀಸ್‌ಗಾಗಿ ದರ್ಶನ ಮತ್ತು ಕ್ರಾಂತಿ ಚಿತ್ರತಂಡದ ಕಲಾವಿದರು ಆಗಮಿಸುತಿದ್ದು, ಚಿತ್ರತಂಡ ಕಲಾವಿದರು, ಅಂಗರಕ್ಷಕರು ಹಾಗೂ ಪೊಲೀಸರೊಂದಿಗೆ ಅಭಿಮಾನಿಗಳು ಸೌಜನ್ಯದಿಂದ ವರ್ತಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮಕ್ಕೆ ಯಾವುದೇ ಸ್ಥಾಪಿತ ವೇದಿಕೆ ಇಲ್ಲ. ಬದಲಾಗಿ ಮೊಬೈಲ್ ವೇದಿಕೆ ಇರುತ್ತದೆ.ಹಾರ ತುರಾಯಿಗೆ, ಸೆಲ್ಪಿಗೆ ಅವಕಾಶವಿಲ್ಲ, ಇದೊಂದು ರಾಜಕೀಯ ರಹಿತ ಕಾರ್ಯಕ್ರಮವಾಗಿದ್ದು, ಅಭಿಮಾನಿಗಳು ಪ್ಲಕ್ಸ್, ಕಟೌಟ್ ಮಾಡುವಾಗ ರಾಜಕಾರಣಿಗಳ ಪೋಟೋ ಬಳಸದಂತೆ ಸೂಚನೆ ನೀಡಿದರು.

ಸಭೆಯಲ್ಲಿ ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಷನ್‌ನ ಜಗದೀಶ್,ಅಖಿಲ ಕರ್ನಾಟಕ ದರ್ಶನ ತೂಗುದೀಪ್ ಅಭಿಮಾನಿ ಬಳಗ ಅಧ್ಯಕ್ಷ ಗಿರೀಶಗೌಡ, ರಾಜ್ಯ ಉಪಾಧ್ಯಕ್ಷ ನಾಗರಾಜು, ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Verified by MonsterInsights