ತುಮಕೂರು:’ಕಚೇರಿ ಅವಧಿಯಲ್ಲಿ ಕಚೇರಿಯಲ್ಲಿ ಅಧಿಕಾರಿಗಳೇ ಇಲ್ಲ, ಅಧಿಕಾರಿಗಳನ್ನು ಕಾಣಲು ಬಂದ ಸಾರ್ವಜನಿಕರೇ ಸರ್ಕಾರಿ ಕಚೇರಿ ಬಾಗಿಲು ಕಾಯುವಂತಹ ಪರಿಸ್ಥಿತಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ನಿರ್ಮಾಣವಾಗಿದೆ.
ಸದಾಶಿವನಗರದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ಕಚೇರಿ ಬಣಬಣ ಎನ್ನುತ್ತಿದ್ದು, ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಾಲಭವನದಲ್ಲಿ ನಡೆಯುತ್ತಿರುವ ಸಫಾಯಿ ಕರ್ಮಚಾರಿಗಳ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಸಫಾಯಿ ಕರ್ಮಚಾರಿ ಆಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಚೇರಿಗೆ ಬೀಗವನ್ನು ಹಾಕದೇ ಬಂದಿದ್ದು, ಫಲಾನುಭವಿಗಳ ದಾಖಲೆಗಳನ್ನು ಯಾರು ಬೇಕಾದರೂ ಕೊಂಡೊಯ್ಯಬಹುದು ಎನ್ನುವಂತಿದೆ ಅಲ್ಲಿನ ಸ್ಥಿತಿ.
ಕಚೇರಿಯಲ್ಲಿ ಕನಿಷ್ಠ ಡಿ ಗ್ರೂಪ್ ಮತ್ತು ಕಂಪ್ಯೂಟರ್ ಆಪರೇಟರ್ ಗಳ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಕಚೇರಿಗೆ ಬಂದಿರುವ ಫಲಾನುಭವಿಗಳು ಹಾಗೂ ಸಾರ್ವಜನಿಕರು ಕಚೇರಿಯ ಬಾಗಿಲನ್ನು ಕಾಯುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.