ತುರುವೇಕೆರೆಯಲ್ಲಿ ಲಾಕಪ್ ಡೆತ್ ..? ಆರೋಪ

ತುರುವೇಕೆರೆ : ಇಸ್ಪೀಟ್ ಆಡುತ್ತಿದ್ದನೆಂಬ ಆರೋಪದ ಮೇರೆಗೆ ವಿಶ್ವಕರ್ಮ ಸಮಾಜದ ಕುಮಾರಾಚಾರ್ ಎಂಬ ವ್ಯಕ್ತಿಯನ್ನು ತುರುವೇಕೆರೆ ಪೋಲೀಸರು ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಕ್ಟೋಬರ್ 23 ರಂದು ಕೆ.ಮಾವಿನಹಳ್ಳಿ ಗ್ರಾಮದ ಕುಮಾರಾಚಾರ್ ಇಸ್ಪೀಟ್  ಆಡುತ್ತಿದ್ದಾನೆಂದು  ಬಿಂಬಿಸಿ ವಶಕ್ಕೆ ಪೋಲೀಸರು ತೀವ್ರತರ ಹಲ್ಲೆ ನಡೆಸಿದ ಪರಿಣಾಮ ಹತ್ಯೆಗೈದಿರುವುದು  ಸ್ಪಷ್ಟ, ಇಸ್ಪೀಟ್ ಆಡುತ್ತಿದ್ದರೆಂಬ ಆರೋಪದ ಮೇರೆಗೆ ವಶಕ್ಕೆ ಪಡೆದಿದ್ದ ವ್ಯಕ್ತಿಯೊಬ್ಬನನ್ನು ಹೆದರಿಸಿದ ಪೋಲೀಸರು ಮೃತ ಕುಮಾರಾಚಾರ್ ಅವರಿಗೆ ಪಿಡ್ಸ್ ಬರುತ್ತಿತ್ತು ಎಂದು ದೂರಿನಲ್ಲಿ ಬರೆಸಿಕೊಂಡಿದ್ದಾರೆ.

ಒಟ್ಟಾರೇ ಇಸ್ಪೀಟ್ ಆಡುತ್ತಿದ್ದ ಆರೋಪದ ಮೇರೆಗೆ ಪೋಲೀಸರ ವಶದಲ್ಲಿದ್ದ ಕುಮಾರಾಚಾರ್ ಸಾವು ಸಂಶಯಾಸ್ಪದವಾಗಿದೆ. ಸಹಜವಾಗಿ ಕುಮಾರಾಚಾರ್ ಟಿ.ವಿ.ಎಸ್. ವಾಹನ ಚಾಲನೆ ಮಾಡುತ್ತಿದ್ದ ಕುಮಾರಾಚಾರ್ ಕೆಳಗೆ ಬಿದ್ದ ನಂತರ ಸಮೀಪದಲ್ಲಿಯೇ ಇದ್ದ ಸಂಬಂಧಿಕರಿಗೆ ಪೋಲೀಸರು ವಿಷಯವನ್ನು ತಲುಪಿಸದಿರುವುದು ಅನುಮಾನಕ್ಕೆಡೆ ಮಾಡಿದೆ ಎಂದರು.

ವಿಠಲದೇವರಹಳ್ಳಿ ಬಳಿ ಟಿ.ವಿ.ಎಸ್.ನಿಂದ ಕೆಳಗೆ ಬಿದ್ದ ಕುಮಾರಾಚಾರ್ ಅವರನ್ನು ಪೋಲೀಸರು ತುರುವೇಕೆರೆಗೆ ಕರೆತಂದಿದ್ದು ಹೇಗೆ, ದ್ವಿಚಕ್ರವಾಹನದಲಿ ಕರೆತರಲಾಯಿತೇ. ಅಥವಾ ಯಾವ ವಾಹನದಲ್ಲಿ ಕರೆತರಲಾಯಿತು. ಆ ವೇಳೆಗಾಗಲೇ ಶವವಾಗಿದ್ದ ಕುಮಾರಾಚಾರ್‌ನನ್ನು ಕರೆತರಲು ಬಳಕೆ ಮಾಡಿದ ಕಾರು ಯಾರದ್ದು, ಕುಮಾರಾಚಾರ್ ಅವರನ್ನು ನೇರ ಪೋಲೀಸ್ ಠಾಣೆಗೆ ಕರೆತರಲಾಯಿತೇ ಅಥವಾ ಶವವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತೇ ಎಂಬುದು ಚಿದಂಬರ ರಹಸ್ಯವಾಗಿ ಉಳಿದಿದೆ ಎಂದರು.

ಕುಮಾರಾಚಾರ್ ಸಾವನ್ನು ತನಿಖೆ ನಡೆಸಲು ಮುಂಧಾಗಿರುವ ಪೋಲೀಸ್ ಇಲಾಖೆ ಸಂಬಂಧಪಟ್ಟ ಪಿ.ಎಸ್.ಐ. ಗಣೇಶ್, ಎಸ್.ಬಿ.ಪೇದೆ ಪ್ರಮೋದ್, ಎ.ಎಸ್.ಐ. ಸುರೇಶ್, ಪೇದೆಗಳಾದ ರಂಗನಾಥ್, ಅರುಣ್ ಕುಮಾರ್ ಅವರನ್ನು ಅಮಾನತ್ತಿನಲ್ಲಿರಿಸಿ ವಿಚಾರಣೆ ನಡೆಸಬೇಕು, ಇಲ್ಲವಾದಲ್ಲಿ ತಮ್ಮದೇ ಪ್ರಭಾವ ಬಳಸಿ ಸಾಕ್ಷಿ ನಾಶ ಮಾಡಿ ತನಿಖೆ ಹಾದಿ ತಪ್ಪಲಿದೆ ಎಂದ ಅವರು ಕುಮಾರಚಾರ್ ಹತ್ಯೆಗೈದಿರುವ ಪೋಲೀಶರ ಕ್ರಮ ಖಂಡಿಸಿ ಸೋಮವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಗೋಷ್ಟಿಯಲ್ಲಿ ಕೊಂಡಜ್ಜಿ ವಿಶ್ವನಾಥ್, ವಿ.ಬಿ.ಸುರೇಶ್, ಚಿದಾನಂದ್, ಯುವ ಮುಖಂಡ ದಯಾನಂದ್, ತೇಜು ಹಾಗೂ ಕುಮಾರಾಚಾರ್  ಕುಟುಂಬ ವರ್ಗ ಹಾಜರಿದ್ದರು.

Verified by MonsterInsights