ತೆಂಗು ಬೆಳೆಗಾರರನ್ನು ನಿರ್ಲಕ್ಷ್ಯಿಸಿದ ಬಿಜೆಪಿ ಸರ್ಕಾರ

ತಿಪಟೂರು: ಕೊಬ್ಬರಿಗೆ ಅವೈಜ್ಞಾನಿಕವಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತಿರುವ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಮನವಿ ಮಾಡಿದ್ದಾರೆ.

ತೋಟಗಾರಿಕಾ ಇಲಾಖೆ ಉಂಡೆ ಕೊಬ್ಬರಿಗೆ ರೂ.16,730 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಶಿಫಾರಸನ್ನು ಗಣನೆಗೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ರೂ.11,000 ನಿಗದಿಪಡಿಸಿದೆ. ಈ ನಿಗದಿತ ಅವೈಜ್ಞಾನಿಕ ಬೆಲೆಗೆ ರೈತರ ಹಿತದೃಷ್ಟಿಯಿಂದ ಆಕ್ಷೇಪಿಸಬೇಕಾದ ರಾಜ್ಯ ಸರ್ಕಾರ ಆ ಕೆಲಸವನ್ನು ಮಾಡಿಲ್ಲ. ಇದು ರಾಜ್ಯ ಸರ್ಕಾರದ ರೈತ ವಿರೋಧಿ ನಡೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದಾರೆ.

ಉಂಡೆ ಕೊಬ್ಬರಿ ಈವರೆಗೂ ಮಾರುಕಟ್ಟೆಯಲ್ಲಿ ರೂ.17 ರಿಂದ 18 ಸಾವಿರ ಬೆಲೆಗೆ ಮಾರಾಟವಾಗುತ್ತಿತ್ತು. ಆದರೆ ಇದೀಗ ಮಾರುಕಟ್ಟೆಯಲ್ಲಿ ಕೊಬ್ರೂ.11,500 ಮಾರಾಟವಾಗುತ್ತಿದ್ದು, ತೆಂಗು ಬೆಳೆಯನ್ನು ನಂಬಿ ಕೊಂಡಿರುವ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಬೆಂಗಳೂರು, ಶಿವಮೊಗ್ಗ ಜಿಲ್ಲೆಯ ರೈತರು ಉಂಡೆ ಕೊಬ್ಬರಿ ಬೆಲೆ ಕುಸಿತದಿಂದ ಕಂಗಲಾಗಿದ್ದಾರೆ.

ಕೇಂದ್ರ ಸರ್ಕಾರ ಹೊಸ ಮಾರುಕಟ್ಟೆ ಕಾಯ್ದೆ ಜಾರಿಗೆ ತಂದ ನಂತರ ಮಾರುಕಟ್ಟೆ ಪ್ರಾಂಗಣದಲ್ಲಿ ಉತ್ಪನ್ನ ಖರೀದಿಸುವ ವ್ಯಾಪಾರಸ್ಥರ ಸಂಖ್ಯೆ ತೀರ ಕ್ಷೀಣಿಸಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿ ಮಾರುಕಟ್ಟೆಗಳು ನಶಿಸುತ್ತಿವೆ. ದೆಹಲಿಯ ರೈತ ಚಳವಳಿಯ ನಂತರ ಕೇಂದ್ರ ಸರ್ಕಾರ ಹೊಸ ಮಾರುಕಟ್ಟೆ ಕಾಯ್ದೆಯನ್ನು ಹಿಂಪಡೆದರೂ, ರಾಜ್ಯದ ಈಗಿನ ರೈತ ವಿರೋಧಿ ಸರ್ಕಾರ ಹಳೆ ಕಾಯ್ದೆಯನ್ನು ಮತ್ತೆ ಜಾರಿಗೆ ತರುವಲ್ಲಿ ವಿಫಲವಾಗಿದೆ. ಹೀಗಾಗಿ ರಾಜ್ಯದ ಸುಮಾರು 18 ಜಿಲ್ಲೆಗಳ ತೆಂಗು ಹಾಗೂ ಕೊಬ್ಬರಿ ಬೆಳೆಗಾರರ ಪರವಾಗಿ ಕಾಂಗ್ರೆಸ್ ಪಕ್ಷ ಬೆನ್ನೆಲುಬಾಗಿ ನಿಲ್ಲಬೇಕೆಂದು ಟೂಡಾ ಶಶಿಧರ್ ಅವರು ಸಿದ್ದರಾಮಯ್ಯನವರಿಗೆ ಮನವಿ ಮಾಡಿಕೊಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯದಿಂದಾಗಿ ಅಧಿಕ ಮಳೆಯಾಗಿ ಹಾಗೂ ಪ್ರಸ್ತುತ ಚಳಿಗಾಲ ಪ್ರಾರಂಭವಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಿ ನೈಸರ್ಗಿಕವಾಗಿ 9 ತಿಂಗಳಲ್ಲಿ ತಯಾರಾಗುವ ಒಣ ಉಂಡೆ ಕೊಬ್ಬರಿಯು 14-15 ತಿಂಗಳಾದರೂ ತಯಾರಾಗದೆ ಸಾಕಷ್ಟು ಪ್ರಮಾಣದಲ್ಲಿ ತೇವಾಂಶದಿಂದ ಕೂಡಿರುತ್ತದೆ. ತೆಂಗಿನಕಾಯಿಯನ್ನು ಕೊಬ್ಬರಿಯನ್ನಾಗಿಸಲು ಇನ್ನಷ್ಟು ದಿನ ಶೇಖರಣೆ ಮುಂದುವರಿಸಿದರೆ ಪ್ರಸ್ತುತ ಕಟಾವು ಮಾಡಿದ ತೆಂಗಿನಕಾಯಿಯನ್ನು ಶೇಖರಿಸಲು ರೈತರ ಬಳಿ ಸಾಕಷ್ಟು ಅಟ್ಟಗಳ ಲಭ್ಯತೆ ಇಲ್ಲ. ಇದರಿಂದಾಗಿ ರೈತರು ಈ ಹಿಂದೆ ಶೇಖರಿಸಿಟ್ಟ ಕೊಬ್ಬರಿಯ ತೇವಾಂಶ ಹೆಚ್ಚಿದ್ದರೂ ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಅನಿವಾರ್ಯತೆ ಉಂಟಾಗಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅತಿವೃಷ್ಟಿಯಂತಹ ನೈಸರ್ಗಿಕ ವಿಕೋಪದಿಂದ ಗುಣಮಟ್ಟ ಕಳೆದುಕೊಂಡಿರುವ ಉಂಡೆಕೊಬ್ಬರಿಗೆ ಸರ್ಕಾರದಿಂದ ಪ್ರತಿ ಕ್ವಿಂಟಾಲ್ಗೆ ರೂ.3 ಸಾವಿರ ಪರಿಹಾರ ಮೊತ್ತವನ್ನು ಸಹಾಯಧನ ರೂಪದಲ್ಲಿ ಕೊಡಿಸಬೇಕು. ಇದರಿಂದ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಗೆ ಕೊಂಚ ಮಟ್ಟಿಗಾದರೂ ಆಧಾರ ಸಿಗಲಿದೆ ಎಂದು ಟೂಡಾ ಶಶಿಧರ್ ಅವರು ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದಾರೆ.

 

Verified by MonsterInsights