ಎಂ.ಡಿ.ಪಲ್ಲವಿ ಗಾಯನಕ್ಕೆ ತಲೆದೂಗಿದ ಬಳ್ಳಾರಿ ಜನತೆ

ಬಳ್ಳಾರಿ ಉತ್ಸವದ ಅಂಗವಾಗಿ ನಗರದ ಮುನ್ಸಿಪಲ್ ಕಾಲೇಜು ಆವರದಲ್ಲಿ ಶನಿವಾರ ಆಯೋಜಿಸಲಾದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ ಅವರು‌ ಗಾಯನ ಪ್ರಸ್ತುತ ಪಡಿಸಿದರು.

ಎಂ.ಡಿ.ಪಲ್ಲವಿ ಕಂಠಸಿರಿಯಲ್ಲಿ ಶಿಶುನಾಳ ಶರೀಫರ‌‌ ತತ್ವಪದ ‘ಸೋರುತಿಹುದು ಮನೆಯ ಮಾಳಿಗೆ’ ಜಿ.ಎಸ್. ಶಿವರುದ್ರಪ್ಪ ವಿರಚಿತ, ಸಿ.ಅಶ್ವಥ್ ‌ರಾಗ ಸಂಯೋಜನೆಯ ‘ಕಾಣದ ಕಡಲಿಗೆ‌ ಅಂಬಲಿಸಿದೆ ಮನ’ ಡಿ.ವಿ.ಗುಂಡಪ್ಪನವರ ಮಂಕತಿಮ್ಮನ ಕಗ್ಗಗಳಾದ ‘ಬುದುಕು ಜಟಾಕಾ ಬಂಡಿ’ ‘ಅಕ್ಕಿಯೊಳಗೆ ಅನ್ನವನು ಮೊದಲಾರು ಕಂಡವರು?’ ‘ಇಳೆಯಿಂದ ಮೊಳಕೆಯೊಗೆ ಒಂದು ತಮಟೆ ಇಲ್ಲ’ ‘ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಯಾಗು’ ‘ನಗುವು ಸಹಜದ ಧರ್ಮ’ ಗೀತೆಗಳು ಮೂಡಿಬಂದವು.

 

ದುನಿಯಾ ಚಲಚಿತ್ರದ ‘ನೋಡಯ್ಯಾ ಕೋಟಿ ಲಿಂಗವೇ…ಬೆಳ್ಳಕ್ಕೆ ಜೋಡಿ ಕುಂತವೇ’ ಹಾಡಿಗೆ ಪ್ರೇಕ್ಷಕರು ಸಹ ಧ್ವನಿ‌ ಗೂಡಿಸಿ ಹಾಡಿದ್ದು ವಿಶೇಷವಾಗಿತ್ತು. ಈ‌ ಗೀತೆಗೆ ಎಂ.ಡಿ.ಪಲ್ಲವಿ ಅವರಿಗೆ ರಾಜ್ಯ ಸರ್ಕಾರದ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ಸಂದಿರುವುದನ್ನು ನೆನೆಪಿಸಿಕೊಳ್ಳಬಹುದು.

ಕೆ.ಎಸ್.ನಿಸಾರ್ ಅಹಮದ್ ಅವರ ವಿರಚಿತ ಮೈಸೂರ ಅನಂತಸ್ವಾಮಿ ಸಂಗೀತ ಸಂಯೋಜನೆಯ ‘ಕುರಿಗಳು ಸಾರ್ ಕುರಿಗಳು’ ಗೀತೆ ಪ್ರೇಕ್ಷಕರಲ್ಲಿ ವಿಕಟ ಹಾಸ್ಯ ಹೊರಹೊಮ್ಮಲು ಹಾಗೂ ಸಮಾಜದ ವಿಡಂಬನೆ ಚಿಂತಿಸಲು ಪ್ರೇರೆಪಿಸಿತು.

ಎಂ.ಎನ್.ವ್ಯಾಸರಾವ್ ರಚನೆಯ ಸಿ.ಎಸ್.ಅಶ್ವಥ್ ಸಂಗೀತ ಸಂಯೋಜನೆಯ ‘ನೀ ಇಲ್ಲದೇ ನನಗೆ ಏನಿದೆ’ ಗೀತೆಯನ್ನು ಹಾಗೂ ಜನಪ್ರಿಯ ಹಿಂದಿ ಕವಾಲಿ ಗೀತೆ ‘ ಓ ಲಾಲ್ ಮೆರಿ ಪಥ್ ರಟಿಯಾ ಬಲಾ’ ಹಾಡುಗಳನ್ನು ಗಾಯಕಿ ಎಂ.ಡಿ.ಪಲ್ಲವಿ ಪ್ರೇಕ್ಷಕರ ಕೋರಿಕೆ ಮೇರೆಗೆ ಪ್ರಸ್ತುತ ಪಡಿಸಿದರು.

ಶಬ್ದ ಗಾರುಡಿಗ, ವರಕವಿ ದ.ರಾ.ಬೇಂದ್ರೆ ಅವರ ‘ಆಹು ಈ ವಿನಾ ನಾವು ನೀವಿಗೆ’ ನಾಲ್ಕುತಂತಿ ಗೀತೆ ತನ್ನ ವಿಶೇಷ ಪದ ಬಳಕೆ ಹಾಗೂ ರಾಗ ಸಂಯೋಜನೆ, ಎಂ.ಡಿ.ಪಲ್ಲವಿ ಉತ್ತಮ ಗಾಯನದಿಂದಾಗಿ ಕೇಳುಗರನ್ನು ವಿಸ್ಮಯಗೊಳಿಸಿ ಚಪ್ಪಾಳೆ‌ ಗಿಟ್ಟಿಸಿಕೊಂಡಿತು.

ಬಿ.ಆರ್.ಲಕ್ಷಣರಾವ್ ರಚನೆಯ ಸಿ.ಎಸ್.ಅಶ್ವಥ್ ಸಂಗೀತ ಸಂಯೋಜನೆಯ ‘ಅಮ್ಮಾ ನಿನ್ನಾ ಎದೆ ಆಳದಲ್ಲಿ ಗಾಳ ಸಿಕ್ಕ ಮೀನು’ ಕೇಳುಗರಲ್ಲಿ ತಾಯಿ ಹಾಗೂ ಮಗುವಿನ ಅನನ್ಯ ಸಂಬಂಧದ ಬಗ್ಗೆ ಬೆರಗು ಮೂಡಿಸಿತು. ಅಮ್ಮನ ತೋಳ ಬಂದಿಯಿಂದ ಹೊರಬಂದು ಜಗ ಅನ್ವೇಷಣೆ ಹೊರಟ ಕಂದ, ಮರಳಿ ತಾಯಿ ಪ್ರೀತಿಗೆ ಹಾತೊರೆದು ಮರಳಿ ಅಮ್ಮನ ಮಡಿಲು ಸೇರುವ ಗೀತೆ ಇದಾಗಿದೆ.

ಟಿ.ಎಸ್.ನಾಗಾಭರಣ ನಿರ್ದೇಶನ ನಾಗಮಂಡಲ ಚನಲಚಿತ್ರದ ಸಿ.ಎಸ್.ಅಶ್ವಥ ಸಂಯೋಜನೆ, ಸಂಗೀತಾ ಕಟ್ಟಿ ಗಾಯನದಲ್ಲಿ ಮೂಡಿಬಂದ’ಕಂಬದ ಮೇಲಿನ ಗೊಂಬೆಯೇ’ ಗೀತೆ ಹಾಗೂ ಮೈಸೂರು ಮಲ್ಲಿಗೆ ಚಲನಚಿತ್ರದ ಕೆ.ಎಸ್.ನರಸಂಹಸ್ವಾಮಿ ರಚನೆಯ, ಸಿ.ಎಸ್.ಅಶ್ವಥ್ ರಾಗ ಸಂಯೋಜನೆಯ ‘ದೀಪವು ನಿನ್ನದೇ,ಗಾಳಿಯು ನಿನ್ನದೇ ಆರದಿರಲಿ ಬದುಕು’ ಗೀತೆಗಳನ್ನು ಎಂ.ಡಿ.ಪಲ್ಲವಿ ಹಾಡಿದರು.

Verified by MonsterInsights